ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ನಿನ್ನ ಬಿಡುವೇನೇನಯ್ಯ                       

ನಿರತವೂ ಧ್ಯಾನ ಮಾಡುತಾ ನಿನ್ನ

ಊರುತ ಮಂಡಿಯ ಬೇಡುವೆ ನಿನ್ನ

ಮುಕ್ತಿಯು ಎನಗೆ ಬರುವಾ ತನಕ

ಶಕ್ತಿಯ ನೀಡೋ ಇರುವಾ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

ಬಾಲವ ಸುತ್ತಿ ಮೇಲಕೆ ಎತ್ತಿ

ಭಯವನು ಬಿತ್ತಿ ಭುವಿಗೇ ಒತ್ತಿ

ಹಚ್ಚಲು ಸುತ್ತ ಬೆಂಕಿಯ ಹುತ್ತ

ಅಂಜುವನೇನೋ ನಿನ್ನಯ ಭಕ್ತ  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಗದೆಯನೇ ಎತ್ತಿ ಬೀಸಿದರೇನು

ಎದೆಯನೇ ಪಾದದಿ ಒತ್ತಿದರೇನು

ನೀಡಲು ನೀನು ಅಗಣಿತ ಶಿಕ್ಷೆ

ಅದುವೇ ಎನಗೆ ರಾಮರಕ್ಷೆ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ

ರಭಸದಿ ಗಾಳಿ ಬೀಸಿದರೇನು

ತರಗೆಲೆಯಂತೆ ಉದರಿದರೇನು   

ಎದೆಯಾ ಸೀಳಿ ನಕ್ಕರೂ ನೀನು 

ಅಂಜೆನು ಹನುಮ ಎಂದಿಗೂ ನಾನು  

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

ಬಿಡುವೇನೇನೋ ಹನುಮ ಬಿಡುವೇನೇನಯ್ಯ

ಭಕ್ತಿಯ ಭವದಲಿ ಮುಳುಗಿಹೆ ನಾನು  

ಹಾರುತ ಬಂದು ಕರುಣಿಸೋ ನೀನು  

ದರುಶನ ನೀನು ನೀಡುವ ತನಕ

ಜ್ಞಾನದ ಬೆಳಕ ತೋರುವ ತನಕ

ಬಿಡುವೇನೇನಯ್ಯ ನಾನು ಬಿಡುವೇನೇನಯ್ಯ         

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ

ಶಿರದ ಮೇಲೆ ಹಸ್ತವನಿಟ್ಟು

ಕರಗಳ ಮುಟ್ಟಿ ಅಭಯವ ಕೊಟ್ಟು 

ಹರಸುವತನಕ ಬಿಡೆನೋ ನಾನು

ಶಬರಿಯ ಹಾಗೇ ಕಾಯುವೆ ನಾನು 

ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ                

ಅಂಜನಿ ಪುತ್ರನ ಧ್ಯಾನವ ಮಾಡಿ

ನಿತ್ಯವೂ ಅವನ ಹಾಡನು ಹಾಡಿ

ಹನುಮನೇ ಬರುವನು ತಲೆ ತೂಗಿ

ಪ್ರಭಾಕರ ಶರ್ಮನ ಅವ ಅನುರಾಗಿ

ರಚನೆ: ಡಾ. ಪ್ರಭಾಕರ್ ಬೆಳವಾಡಿ

Leave a Reply

Your email address will not be published. Required fields are marked *